Skip to main content

ಭೀಮನ ಅಮಾವಾಸ್ಯೆ

ಷಾಢ ಮಾಸದ ಕೊನೆಯ ದಿನವನ್ನು ಆಷಾಢ ಅಮಾವಾಸ್ಯೆಯೆಂದು ಕರೆಯಲಾಗುತ್ತದೆ. ಈ ಅಮಾವಾಸ್ಯೆಯ ದಿನವನ್ನು ಭೀಮನ ಅಮಾವಾಸ್ಯೆ ಅಥವಾ ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಈ ದಿನದಂದು ವಿವಾಹಿತ ಮಹಿಳೆಯರು ತಮ್ಮ ಪತಿಯ ದೀರ್ಘಾಯುಷ್ಯವನ್ನು, ಉತ್ತಮ ಆರೋಗ್ಯವನ್ನು ಕೋರಿ ಪಾದ ಪೂಜೆಯನ್ನು ಮಾಡುತ್ತಾರೆ. ಅದೇ ರೀತಿ ಅವಿವಾಹಿತ ಮಹಿಳೆಯರು ದ್ಗುಣ ಸಂಪನ್ನನಾದ ಪತಿಯನ್ನು ಪಡೆದುಕೊಳ್ಳುವುದಕ್ಕಾಗಿ ಈ ವ್ರತವನ್ನು ಮಾಡುತ್ತಾರೆ. ಭೀಮನ ಅಮಾವಾಸ್ಯಯೆಂದರೆ ಅದು ಮಹಾಭಾರತದ ಭೀಮನಲ್ಲ. ಬದಲಾಗಿ, ಶಿವನ ರೂಪವಾದ ರುದ್ರನ ಇನ್ನೊಂದು ಹೆಸರು ಭೀಮನಾಗಿದೆ.


ವಿವಾಹಿತರಿಗೆ ಆಗಿರಬಹುದು ಅಥವಾ ಅವಿವಾಹಿತರಿಗೆ ಆಗಿರಬಹುದು ಭೀಮನ ಅಮಾವಾಸ್ಯೆ ಎನ್ನುವುದು ತುಂಬಾನೇ ಶ್ರೇಷ್ಠವಾದ ವ್ರತ. ಈ ದಿನದಂದು ವಿವಾಹಿತ ಮಹಿಳೆಯರು ಪತಿಯ ದೀರ್ಘಾಯಷ್ಯವನ್ನು ಕೋರಿ ಶಿವ ಮತ್ತು ಪಾರ್ವತಿಯನ್ನು ಪೂಜಿಸುತ್ತಾರೆ. ಭೀಮನ ಅಮಾವಾಸ್ಯೆ ದಿನ ದೇವರ ಪೂಜೆ ಮತ್ತು ಪತಿಯ ಪಾದ ಪೂಜೆ ಮಾಡುವುದು ಹೇಗೆ?


ಭೀಮನ ಅಮಾವಾಸ್ಯೆ ಅಥವಾ ಜ್ಯೋತಿರ್ಭೀಮೇಶ್ವರ ಅಮಾವಾಸ್ಯೆ ಪೂಜೆ ಮಾಡುವುದು ಹೇಗೆ.?
- ಭೀಮನ ಅಮಾವಾಸ್ಯೆ ದಿನದಂದು ನೀವು ಮತ್ತು ನಿಮ್ಮ ಪತಿ ಮುಂಜಾನೆ ಬೇಗ ಎದ್ದು ಸ್ನಾನ ಇತ್ಯಾದಿಗಳಿಂದ ಶುದ್ಧರಾಗಿ ಮನೆಯ ದೇವರ ಕೋಣೆಯಲ್ಲಿ ದೇವರನ್ನು ನಿಯಮಾನುಸಾರ ಪೂಜಿಸಬೇಕು.
- ಈ ದಿನ ಕುಲದೇವರನ್ನು ತಪ್ಪದೇ ಪೂಜಿಸುವುದು ಒಳ್ಳೆಯದು.
- ಒಂದು ಮರದ ಮಣೆಯ ಮೇಲೆ ಅಥವಾ ಒಂದು ತಟ್ಟೆಯ ಮೇಲೆ ಅಕ್ಕಿಯನ್ನು ಹರಡಿ, ಅದರ ಮೇಲೆ ದೀಪವನ್ನು ಹಚ್ಚಿಡಬೇಕು.
- ದೀಪವನ್ನು ಹಚ್ಚುವ ಮುನ್ನ ಆ ದೀಪವನ್ನು ಶುದ್ಧಗೊಳಿಸಿ, ಅದಕ್ಕೆ ಅರಿಶಿನ ಮತ್ತು ಕುಂಕುಮವನ್ನು ಹಚ್ಚಿ, ದೀಪಕ್ಕೆ ಹೂವುಗಳಿಂದ ಅಲಂಕಾರ ಮಾಡಿ ಅಕ್ಷತೆಯನ್ನು ಹಾಕಿ ಜೋಡಿ ದೀಪಗಳನ್ನು ಬೆಳಗಬೇಕು.
- ದೀಪವನ್ನು ಬೆಳಗುವ ಮುನ್ನ ಈ ಮಂತ್ರವನ್ನು ಪಠಿಸಿ, ದೀಪಕ್ಕೆ ನಮಸ್ಕಾರವನ್ನು ಮಾಡಿ ದೀಪ ಬೆಳಗಬೇಕು.
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪಾದಃ|
ಶತ್ರು ಬುದ್ಧಿ ವಿನಾಶಾಯ ದೀಪರ್ಜ್ಯೋತಿ ನಮೋಸ್ತುತೇ ||
ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ|
ದೀಪೋ ಮೇ ಹರತು ಪಾಪಂ ದೀಪರ್ಜ್ಯೋತಿರ್‌ ನಮೋಸ್ತುತೇ||

- ಬಳಿಕ ಕಲಶ ಪೂಜೆ ಮತ್ತು ಗಂಟೆ ಪೂಜೆಯನ್ನು ಮಾಡಬೇಕು.
- ಸಂಕಲ್ಪವನ್ನು ಮಾಡುವುದಕ್ಕಾಗಿ ಕೈಯಲ್ಲಿ ಒಂದು ಹೂವು, ಅಕ್ಷತೆ ಮತ್ತು ನಾಣ್ಯವನ್ನು ಅಥವಾ ಕೇವಲ ಅಕ್ಷತೆ ಮತ್ತು ಹೂವನ್ನು ಮಾತ್ರ ಇಟ್ಟುಕೊಂಡು ''ಇಹ ಜನ್ಮನಿ ಜನ್ಮಾಂತರ ಸ ಸಕಲ ಸಿಧ್ಯರ್ತೆ ಭೀಮೇಶ್ವರ ಅಮಾವಾಸ್ಯೆ ಪ್ರಯುಕ್ತೇನಾ ಉಮಾ ಮಹೇಶ್ವರ ದೇವತಾ ಪ್ರೀತ್ಯರ್ಥಂ ಎಂದು ಹೇಳಬೇಕು. ಆಗದೇ ಇದ್ದರೆ ಶಿವ ಮತ್ತು ಪಾರ್ವತಿಯನ್ನು ಬೇಡಿಕೊಂಡು ವ್ರತವನ್ನು ಆಚರಿಸುವುದಾಗಿ ಸಂಕಲ್ಪವನ್ನು ತೆಗೆದುಕೊಳ್ಳಿ.
- ಇದಾದ ನಂತರ ಗಣಪತಿಯನ್ನು ಪೂಜಿಸಿ, ಸರಳವಾದ ನೈವೇದ್ಯವನ್ನು ಅರ್ಪಿಸಿ. ಹಾಗೂ ಶಿವ ಮತ್ತು ಪಾರ್ವತಿಯನ್ನು ಗಣೇಶನನ್ನು ಪೂಜಿಸಿದ ನಂತರ ಪೂಜಿಸಬೇಕು.
- ಇದಲ್ಲದೇ ಕೈಯಲ್ಲಿ ಅಕ್ಷತೆಯನ್ನು ಹಿಡಿದು ಹಚ್ಚಿಟ್ಟ ಜೋಡಿ ದೀಪದ ಮುಂದೆ ಕುಳಿತು ಶಿವ, ಪಾರ್ವತಿಯನ್ನು ಬೇಡಿಕೊಂಡು ದೀಪಕ್ಕೆ ಅಕ್ಷತೆಯನ್ನು ಹಾಕಬೇಕು.
- ನಂತರ ನಿಮ್ಮ ಬಲಭಾಗದಲ್ಲಿರುವ ಒಂದು ದೀಪಕ್ಕೆ ಅರಿಶಿನದ ಕೊಂಬನ್ನು ಕಟ್ಟಿದಂತಹ ದಾರವನ್ನು ಕಟ್ಟಬೇಕು.
- ಪೂಜೆಯ ನಂತರ 5 ಎಳೆಯ ಅರಿಶಿನ ಹಚ್ಚಿದ ದಾರವನ್ನು ತೆಗೆದುಕೊಂಡು ಅದಕ್ಕೆ 9 ಗಂಟೆಗಳನ್ನು ಹಾಕಿ, ದಾರದ ಮಧ್ಯೆ ಭಾಗದಲ್ಲಿ ಒಂದು ಹೂವನ್ನಿಟ್ಟು 2 ಗೌರಿ ದಾರವನ್ನು ಸಿದ್ಧಪಡಿಸಿಕೊಂಡು ವೀಳ್ಯದೆಲೆಯ ಮೇಲೆ ಶಿವ - ಪಾರ್ವತಿ ಮುಂದೆ ಇಟ್ಟು ಪೂಜೆಯನ್ನು ಮಾಡಿಕೊಳ್ಳಿ.
- ಗೌರಿ ದಾರ ಮತ್ತು ಜೋಡಿ ದೀಪಕ್ಕೆ ಅರಿಶಿನ, ಕುಂಕುಮ, ಅಕ್ಷತೆ, ಹೂವು, ಗೆಜ್ಜೆ ವಸ್ತ್ರವನ್ನು ಹಾಕಿ ದಾರದಲ್ಲಿನ 9 ಗಂಟುಗಳಿಗೆ ಸರಿಯಾಗಿ ಈ 9 ನಾಮವನ್ನು ಪಠಿಸಬೇಕು. ಇದನ್ನು ದಾರಕ್ಕೆ ಗಂಟು ಹಾಕುವಾಗ ಕೂಡ ಹೇಳಬಹುದು ಅಥವಾ ದಾರವನ್ನು ಪೂಜಿಸುವಾಗ ಕೂಡ ಹೇಳಬಹುದು.
            • ಓಂ ಶಿವಾಯೈ ನಮಃ
            • ಓಂ ಭವಾನಿ ದೇವ್ಯೈ ನಮಃ
            • ರುದ್ರರಾಣಿ ದೇವ್ಯೈ ನಮಃ
            • ಕಾಂತಾಯೈ ನಮಃ
            • ಗಿರಿಜಾಯೈ ನಮಃ
            • ಪಾರ್ವತಯೈ ನಮಃ
            • ಅಂಬಿಕಾಯೈ ನಮಃ
            • ಸಿಂಹ ವಾಹನಾಯೈ ನಮಃ
            • ಹರ ಕಾಂತಾಯೈ ನಮಃ
- ಶಿವ ಪಾರ್ವತಿಗೆ ನೈವೇದ್ಯವನ್ನು, ತಾಂಬೂಲವನ್ನು ಅಂದರೆ ಎಲೆ, ಅಡಿಕೆ, ಬಾಳೆಹಣ್ಣು ಸೇರಿದಂತೆ ಇನ್ನಿತರ ವಸ್ತುಗಳನ್ನು ಅರ್ಪಿಸಬಹುದು.
- ಕೊನೆಯದಾಗಿ ಆರತಿಯನ್ನು ಮಾಡಿ ಪೂಜೆಯನ್ನು ಪೂರ್ಣಗೊಳಿಸಿ.
- ಪೂಜೆಯ ನಂತರ ಪತಿ ಪಾದ ಪೂಜೆಯನ್ನು ಮಾಡಿ. ಪಾದ ಪೂಜೆಯ ಬಳಿಕ ಕೈಯಲ್ಲಿ ಫಲತಾಂಬೂಲ ಅಂದರೆ ಎರಡು ವೀಳ್ಯದೆಲೆ ಅಡಿಕೆ ಮತ್ತು ಹಣ್ಣನ್ನು ಹಿಡಿದುಕೊಂಡು ಪತಿಯ ಕೈಯಿಂದ ದಾರವನ್ನು ಕಟ್ಟಿಸಿಕೊಂಡು ಆಶೀರ್ವಾದವನ್ನು ಪಡೆದುಕೊಳ್ಳಿ. ದಾರ ಕಟ್ಟಿಸಿಕೊಳ್ಳುವಾಗ ಕೈಯಲ್ಲಿ ಹಿಡಿದುಕೊಂಡಿದ್ದ ಫಲ ತಾಂಬೂಲವನ್ನು ಅಕ್ಕಿಯೊಂದಿಗೆ ನಿಮ್ಮ ಕೈಲಾದಷ್ಟು ಕಾಣಿಕೆಯನ್ನಿಟ್ಟು ಬ್ರಾಹ್ಮಣರಿಗೆ ದಾನ ಮಾಡಿ.


ಈ ರೀತಿಯಾಗಿ ನೀವು ಭೀಮನ ಅಮಾವಾಸ್ಯೆ ದಿನದಂದು ಶಿವ ಪಾರ್ವತಿ ಪೂಜೆಯನ್ನು ಮಾಡಬಹುದು. ದೇವರ ಪೂಜೆಯ ಬಳಿಕ ಪತಿಯ ಪಾದ ಪೂಜೆಯನ್ನು ಮಾಡಿ ಕಂಕಣವನ್ನು ಕಟ್ಟಿಸಿಕೊಂಡು ಅವರಿಂದ ಆಶೀರ್ವಾದವನ್ನು ಪಡೆದುಕೊಳ್ಳಬೇಕು. ಈ ರೀತಿ ಪೂಜೆಯನ್ನು ಮಾಡುವುದರಿಂದ ಪತಿಯ ಆಯಸ್ಸು ಹೆಚ್ಚಾಗುತ್ತದೆ. ಪತಿ - ಪತ್ನಿಯ ನಡುವಿನ ಸಂಬಂಧ ಗಟ್ಟಿಯಾಗುತ್ತದೆ ಎನ್ನುವ ನಂಬಿಕೆಯಿದೆ.

- ಭೀಮನ ಅಮಾವಾಸ್ಯೆ ದಿನಾಂಕ: 2025ರ ಜುಲೈ 24ರಂದು ಗುರುವಾರ
- ಪೂಜೆಗೆ ಶುಭ ಮುಹೂರ್ತ: ಬೆಳಗ್ಗೆ 7:00 ಗಂಟೆಯಿಂದ 10:00 ಗಂಟೆಯವರೆಗೆ.

PC: epaper

Comments

  1. ಭೀಮನ ಅಮಾವಾಸ್ಯೆ ಶುಭಾಶಯಗಳು

    ReplyDelete

Post a Comment